ಕಳೆದ ಬುಧವಾರ ೧೩ ರಂದು ಸದಾಶಿವನಗರದ ಡಾ|| ರಾಜ್ ನಿವಾಸವು ಅದ್ದೂರಿಯಾಗಿ ಅಲಂಕೃತಗೊಂಡಿತ್ತು. ಅಂದು ಅಲ್ಲಿ ನಾಲ್ಕು ವರ್ಷಗಳ ನಂತರ ಹೊಸ ಚಿತ್ರವೊಂದರ ಮುಹೂರ್ತ. ಪೂರ್ಣಿಮಾ ಎಂಟರ್ಪ್ರೈಸಸ್ ಲಾಂಛನದಡಿಯಲ್ಲಿ ಡಾ||ರಾಜ್ಕುಮಾರ್ ಅರ್ಪಿಸಿ ಶ್ರೀಮತಿ ಪಾರ್ವತಮ್ಮ ರಾಜ್ಕುಮಾರ್ ನಿರ್ಮಿಸುತ್ತಿರುವ ಅದ್ದೂರಿ ಯಾರೇ ಕೂಗಾಡಲಿ ಚಿತ್ರಕ್ಕೆ ಮುಹೂರ್ತ.
ಚಿತ್ರದ ಮುಹೂರ್ತ ದೃಶ್ಯವನ್ನು ನಾಯಕ ನಟ ಪುನೀತ್ ದೇವರಲ್ಲಿ ತನಗೆ ಹೆಚ್ಚಿನ ಯಶಸ್ಸು ಸಿಗುವಂತೆ ಮಾಡು ಎಂದು ಕೇಳಿ ಕೊಳ್ಳುವ ಮುಹೂರ್ತ ದೃಶ್ಯವನ್ನು ಸುಕುಮಾರ್ ಛಾಯಾಗ್ರಹಣದಲ್ಲಿ ನಿರ್ದೇಶಕ ಸಮುದ್ರಖಣಿ ಚಿತ್ರಿಸಿಕೊಂಡರು. ಚಿತ್ರದ ಮುಹೂರ್ತ ದೃಶ್ಯಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಆರಂಭ ಫಲಕ ತೋರಿಸಿದರೆ ಶ್ರೀಮತಿ ಪಾರ್ವತಮ್ಮ ರಾಜ್ಕುಮಾರ್ ಕ್ಯಾಮರಾ ಚಾಲೂ ಮಾಡಿದರು.
ಮುಹೂರ್ತ ಸಮಾರಂಭಕ್ಕೆ ನಿರ್ಮಾಕರಾದ ಎಸ್.ಎ. ಗೋವಿಂದರಾಜ್, ರಾಕ್ಲೈನ್ ವೆಂಕಟೇಶ್, ಕೆ. ಮಂಜು, ಶ್ರೀಕಾಂತ್, ಟಿ.ಸಿ. ಸಿದ್ಧರಾಜು ಹಾಗೂ ಕೈಗಾರಿಕೋದ್ಯಮಿ ಜಿ.ಪಿ. ನಾರಾಯಣಸ್ವಾಮಿ ನಿರ್ದೇಶಕರಾದ ಎಂ.ಎಸ್. ರಾಜಶೇಖರ್, ಮಾದೇಶ್, ಸೂರಿ, ಮುಂತಾದವರು ಆಗಮಿಸಿ ನಿರ್ಮಾಪಕ ನಿರ್ದೇಶಕರಿಗೆ ಶುಭ ಕೋರಿದರು. ಚಿತ್ರದ ಚಿತ್ರೀಕರಣವು ಈ ತಿಂಗಳ ಅಂತ್ಯದಲ್ಲಿ ಆರಂಭವಾಗಲಿದೆ ಎಂದು ನಟ ನಿರ್ಮಾಪಕ ರಾಘವೇಂದ್ರ ರಾಜ್ಕುಮಾರ್ ತಿಳಿಸಿದ್ದಾರೆ.
ಚಿತ್ರಕ್ಕೆ ಗುರುಪ್ರಸಾದ್ ಸಂಭಾಷಣೆ, ಹರಿಕೃಷ್ಣ ಸಂಗೀತ, ಸುಕುಮಾರ್ (ತಮಿಳು ಮೈನಾ ಖ್ಯಾತಿ) ಛಾಯಾಗ್ರಹಣ, ಜಾಕಿ (ಫರುತ್ತಿ ವೀರನ್ ಖ್ಯಾತಿ) ಕಲೆ, ರವಿವರ್ಮ ಸಾಹಸ, ರುದ್ರೇಶ್ ಎಂ.ಗೌಡ ನಿರ್ದೇಶನ ಸಹಕಾರ, ಚೆನ್ನ ನಿರ್ಮಾಣ ಮೇಲ್ವಿಚಾರಣೆ, ಮಲ್ಲಿಕಾರ್ಜುನ್ ನಿರ್ಮಾಣ-ನಿರ್ವಹಣೆ ಇದ್ದು, ತಮಿಳಿನ ನಾಡೋಡಿಗಳ್, ಪೋರಾಲಿ, ಮುಂತಾದ ಯಶಸ್ವಿ ಚಿತ್ರಗಳನ್ನು ನಿರ್ದೆಶಿಸಿದ ಹೆಸರಾಂತ ನಿರ್ದೇಶಕ ಸಮುದ್ರ ಖಣಿ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಪುನೀತ್ ರಾಜ್ಕುಮಾರ್, ಯೋಗೀಶ್ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ಹಾಗೂ ಉಳಿದ ತಾರಾಗಣ ಆಯ್ಕೆ ಇದೀಗ ಭರದಿಂದ ಸಾಗಿದೆ.